IND vs AUS: ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಹರ್ಮನ್ಪ್ರೀತ್ ಕೌರ್, ಪೂಜಾ ವಸ್ತ್ರಾಕರ್
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಇಂದು ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು, ಮೊದಲ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಅಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿದೆ. ಆದರೆ ಈ ನಡುವೆ ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಅನಾರೋಗ್ಯದ ಕಾರಣದಿಂದಾಗಿ ಟೀಂ ಇಂಡಿಯಾದ ವೇಗದ ಬೌಲರ್ ಪೂಜಾ ವಸ್ತ್ರಾಕರ್ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬರೆದುಕೊಂಡಿದೆ.
ಪೂಜಾ ವಸ್ತ್ರಾಕರ್ ಜೊತೆಗೆ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂದು ಮುಂಜಾನೆಯಿಂದಲೂ ವರದಿಗಳು ಕೇಳಿ ಬರುತ್ತಿದ್ದವು. ಆದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಕೊಂಚ ಸಮಾದಾನಕರ ಸಂಗತಿಯೆಂಬಂತೆ ನಾಯಕಿ ಹರ್ಮನ್ಪ್ರೀತ್ ಇಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಆದರೆ ಪೂಜಾ ವಸ್ತ್ರಕರ್ ತಂಡದಿಂದ ಹೊರಗುಳಿದಿರುವುದು ಖಚಿತವಾಗಿದೆ. ಇದೀಗ ಪೂಜಾ ವಸ್ತ್ರಾಕರ್ ಬದಲಿಗೆ ಸ್ನೇಹ ರಾಣಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
JUST IN – India pacer ruled out of crunch #T20WorldCup semi-final against Australia due to illness.#AUSvIND | #TurnItUp
— ICC (@ICC) February 23, 2023
ಮಹಿಳಾ ಟಿ20 ವಿಶ್ವಕಪ್ನಲ್ಲಿ ಪೂಜಾ ಪ್ರದರ್ಶನ
2023 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಪೂಜಾ ವಸ್ತ್ರಾಕರ್ ಅವರ ಈವರೆಗಿನ ಪ್ರದರ್ಶನವು ವಿಶೇಷವೇನೂ ಆಗಿಲ್ಲ. ಗ್ರೂಪ್ ಹಂತದ 4 ಪಂದ್ಯಗಳನ್ನು ಆಡಿರುವ ಪೂಜಾ, ಕೇವಲ 2 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಆದರೆ, ತಂಡದಲ್ಲಿ ಅವರಿದ್ದರೆ ಕೆಳ ಕ್ರಮಾಂಕದ ಬ್ಯಾಟಿಂಗ್ಗೆ ಸ್ವಲ್ಪ ಬಲ ಬರುತ್ತಿತ್ತು. ಒಟ್ಟಾರೆಯಾಗಿ, ಅವರು ಆಡದಿರುವುದು ತಂಡದ ಸಂಯೋಜನೆಯ ಮೇಲೆ ಪರಿಣಾಮ ಬೀರುವುದಂತೂ ಖಚಿತವಾಗಿದೆ.
ಕೌರ್ ಆಡದಿದ್ದರೆ, ಸ್ಮೃತಿಗೆ ನಾಯಕತ್ವ
ಪೂಜಾ ವಸ್ತ್ರಾಕರ್ ಜೊತೆಗೆ ಎಡಗೈ ಸ್ಪಿನ್ನರ್ ರಾಧಾ ಯಾದವ್ ಕೂಡ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಇಬ್ಬರಲ್ಲದೆ, ನಾಯಕಿ ಹರ್ಮನ್ಪ್ರೀತ್ ಕೂಡ ತಂಡದಿಂದ ಹೊರಗುಳಿದರೆ, ಭಾರತಕ್ಕೆ ಹಿನ್ನಡೆಯುಂಟಾಗುವುದಂತೂ ಖಚಿತ. ಒಂದು ವೇಳೆ ಕೌರ್ ಚೇತರಿಸಿಕೊಳ್ಳದಿದ್ದರೆ, ಅವರ ಸ್ಥಾನದಲ್ಲಿ ಸ್ಮೃತಿ ಮಂಧಾನ ತಂಡದ ನಾಯಕತ್ವ ವಹಿಸಲಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕೌರ್ ಅವರ ಜಾಗಕ್ಕೆ ಹರ್ಲೀನ್ ಡಿಯೋಲ್ ಆಯ್ಕೆಯಾಗಲಿದ್ದಾರೆ.
ನಾಯಕಿ ಹರ್ಮನ್ಪ್ರೀತ್ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಕೌರ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಆದರೆ ಬಿಗ್ ಮ್ಯಾಚ್ಗಳಲ್ಲಿ ಪುಟಿದೇಳುವ ಸಾಮಥ್ಯ್ರವಿರುವ ಕೌರ್ ಲಭ್ಯತೆ ಭಾರತಕ್ಕೆ ಅವಶ್ಯಕವಾಗಿದೆ. ಒಂದು ವೇಳೆ ಈ ಪಂದ್ಯಕ್ಕೆ ವಸ್ತ್ರಕರ್ ಮತ್ತು ರಾಧಾ ಲಭ್ಯವಿಲ್ಲದಿದ್ದರೆ, ತಂಡದ ಬೌಲಿಂಗ್ ಸಂಯೋಜನೆಯನ್ನು ಬದಲಾಯಿಸಲೇಬೇಕಾಗುತ್ತದೆ.