ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೆ ಶಾಸಕರ ಮೇಲಿನ ಆರೋಪಗಳು ಒಂದೊಂದಾಗಿಯೇ ಹೊರಬೀಳುತ್ತಿದೆ. ಇದೀಗ, ಮಾಡಾಳ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಎಸ್ಡಿಎಲ್ ನಿಯಮ ಮೀರಿ 800 ಕೋಟಿಗೂ ಅಧಿಕ ವೆಚ್ಚದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿದ ಆರೋಪ ಕೇಳಿಬಂದಿದೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಬೆಂಗಳೂರು: ಬಿಜೆಪಿ ಶಾಸಕನ ಪುತ್ರ ಪ್ರಶಾಂತ್ ಲೋಕಾಯುಕ್ತ (Lokayukta Raid) ಬಲೆಗೆಬಿದ್ದ ನಂತರ ಶಾಸಕರು ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮ (KSDL)ದಲ್ಲಿ ನಡೆದ ಭಾರೀ ಅವ್ಯವಹಾರ ಬೆಳಕಿಗೆ ಬಂದಿದೆ. ಕೆಎಸ್ಡಿಎಲ್ ನಿಯಮ ಗಾಳಿಗೆ ತೂರಿ 800 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿದ ಆರೋಪ ಸಂಬಂಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ವಿರುದ್ಧ KSDL ನೌಕರರ ಒಕ್ಕೂಟವು ಫೆಬ್ರವರಿ 21ರಂದೇ ಲೋಕಾಯುಕ್ತ ಕಚೇರಿಗೆ ದೂರು ನೀಡಿದೆ. ಟೆಂಡರ್ದಾರರು ಸಾಮಾಗ್ರಿ ದರ ಶೇಕಡಾ 2ರಿಂದ 3ರಷ್ಟು ಹೆಚ್ಚಳಕ್ಕೆ ಅವಕಾಶವಿದೆ, ಆದರೆ ಕಚ್ಚಾ ಸಾಮಗ್ರಿ ದರ ಶೇ.70, 83, 140ರಷ್ಟು ಹೆಚ್ಚಿಸಿದ್ದರು. ಹೀಗಿದ್ದರೂ ಕಚ್ಚಾ ಸಾಮಗ್ರಿ ದರ ಹೆಚ್ಚಳದ ಬಗ್ಗೆ ನೆಗೋಸಿಯೇಷನ್ ಕಮಿಟಿ, ಫೈನಾನ್ಸ್ ಕಮಿಟಿ ಕ್ರಮ ವಹಿಸಿಲ್ಲವೆಂದು ಲೋಕಾಯುಕ್ತರಿಗೆ ದೂರು ನೀಡಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದಾಗ ಸಾಮಾಗ್ರಿ ಖರೀದಿಯಲ್ಲಿ 800 ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಖರೀದಿ, ದಾಸ್ತಾನು ನಿಯಮ ಗಾಳಿಗೆ ತೂರಿ ಸ್ಯಾಂಡ್ರೋಲ್, ಸ್ಯಾಂಡಲ್ ಮೈಸೂರು ಕೋರ್, ಮಿಥೇಲ್, ಟೋನಾಲಿಡ್, ಪ್ಯಾಚ್ ಆಯಿಲ್, ಸ್ಯಾಂಡಲ್ವುಡ್ ಆಯಿಲ್, ಜೆರಾನಿಯಮ್ ಆಯಿಲ್ ಖರೀದಿಸಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತಕ್ಕೆ ಕೆಎಸ್ಡಿಎಲ್ ನೌಕರರ ಒಕ್ಕೂಟವು ದೂರು ನೀಡಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಸಿಕ್ಕಿತು ಕಂತೆ ಕಂತೆ ಹಣ, ಚಿನ್ನ
ಲಂಚ ಸ್ವೀಕಾರದ ವೇಳೆ ತನ್ನ ಪುತ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಪ್ತರ ಮೂಲಕ ಮುಖ್ಯಮಂತ್ರಿಯವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಎಸಿಬಿ ರದ್ದುಗೊಂಡು ಲೋಕಾಯುಕ್ತ ಮರು ನಿರ್ಮಾಣದ ನಂತರ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಗಳಲ್ಲಿ ಇದು ಅತಿದೊಡ್ಡ ದಾಳಿಯಾಗಿದೆ. ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ಪುತ್ರನೇ ಬಂಧನಕ್ಕೊಳಗಾಗಿದ್ದಾನೆ. ಸದ್ಯ ದಾಖಲಾದ ಲೋಕಾಯುಕ್ತ ಎಫ್ಐಆರ್ನಲ್ಲಿ ಮೊದಲ ಆರೋಪಿಯಾಗಿ ಶಾಸಕ ಮಾಡಾಳ್ ಇದ್ದು, ಎರಡನೇ ಆರೋಪಿಯಾಗಿ ಶಾಸಕರ ಪುತ್ರನಾಗಿದ್ದಾನೆ. ಈತನ ಬಂಧನದ ನಂತರ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಆರಂಭಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ