Mangaluru Malali Masjid Temple Controversy: ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗಣಹೋಮ ನಡೆದಿದೆ.
ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ಇತ್ತು ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಂದಿರ ನಿರ್ಮಾಣ ವಿಚಾರಕ್ಕೆ ಹಿಂದೂ ಪರ ಸಂಘಟನೆ ಇಂದು ಗಣಹೋಮ ನೆರವೇರಿಸಿದೆ. ಗಣಹೋಮದ ಮೂಲಕ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ.
ಮಂಗಳೂರು ತಾಲೂಕಿನ ಮಳಲಿ ಪ್ರದೇಶದಲ್ಲಿರುವ ಮಸೀದಿ ಒಳಗಡೆ ಮಂದಿರದ ರಚನೆ ಕಂಡು ಬಂದಿತ್ತು. ಮಸೀದಿ ನವೀಕರಣದ ವೇಳೆ ಮಂದಿರ ರಚನೆಯ ಕುರುಹು, ದೇವಸ್ಥಾನದ ಗರ್ಭ ಗುಡಿಯನ್ನು ಹೋಲುವ ರಚನೆ ಪತ್ತೆಯಾಗಿತ್ತು. ಇದಾದ ಬಳಿಕ ಈ ವಿಚಾರ ವಿವಾದಕ್ಕೆ ಕಾರಣವಾಯಿತು. ನ್ಯಾಯಾಲಯದ ಮೆಟ್ಟಿಲೇರಿತ್ತು. ತಾಂಬೂಲ ಪ್ರಶ್ನೆಯ ಮೊರೆ ಹೋಗಿದ್ದ ಹಿಂದೂ ಸಂಘಟನೆಗಳು, ಕಳೆದ ಮೇ ತಿಂಗಳಿನಲ್ಲಿ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟರು. ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ನಡೆಸಲು ಸಲಹೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ಗಣಹೋಮದ ಮೂಲಕ ಮಂದಿರ ನಿರ್ಮಾಣಕ್ಕೆ ದೇವರ ಅನುಗ್ರಹ ಪಡೆಯಲಾಗಿದೆ. ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗಣಹೋಮ ನಡೆದಿದೆ. ಕಾರ್ಯಕ್ರಮದಲ್ಲಿ ಶಾಸಕ ಭರತ್ ಶೆಟ್ಟಿ, ಹಿಂದೂ ಮುಖಂಡರಾದ ಶರಣ್ ಪಂಪ್ ವೆಲ್ ಸೇರಿದಂತೆ ಹಲವು ಮಂದಿ ಹಿಂದೂ ಸಂಘಟನೆಗಳ ನಾಯಕರು ಭಾಗಿಯಾಗಿದ್ದರು.
ಇನ್ನು ಮಳಲಿ ಭಜನಾಮಂದಿರದಲ್ಲಿ ಹಿಂದೂ ಸಂಘಟನೆಗಳ ಗಣಯಾಗ ಸಂಬಂಧ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಕಲ್ಯಾಣಾರ್ಥವಾಗಿ ಈ ಗಣಯಾಗ ನಡೆದಿದೆ. ಜೊತೆಗೆ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ಮಾಡಬೇಕೆಂದು ಸಲಹೆ ಸಿಕ್ಕಿತ್ತು. ಸ್ಥಳದಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಗಣಯಾಗ ನಡೆದಿದೆ. ನನ್ನನ್ನು ಹಿಂದೂ ಸಂಘಟನೆಗಳು ಯಾಗಕ್ಕೆ ಅಹ್ವಾನಿಸಿದ್ದರು. ನಾನು ಯಾಗಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ್ದೇನೆ. ಯಾಗದ ಬಗ್ಗೆ ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ