ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡಿದ್ದಾರೆ. ಆದರೆ…
ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ (UN Annual Meeting) ಕನ್ನಡದಲ್ಲಿ (Kannada) ಮಾತನಾಡಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅವರ ಭಾಷಣವನ್ನು ಮೊಟಕುಗೊಳಿಸಲಾಗಿದೆ. ಆಗಿದ್ದಿಷ್ಟು, ರಿಷಬ್ ಶೆಟ್ಟಿಯವರು ವಿಶ್ವಸಂಸ್ಥೆಯ ವಾರ್ಷಿಕ ಸಭೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ಭಾಷಣ ಮಾಡಿದರು. ರಿಷಬ್ ಶೆಟ್ಟಿ ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. ಆದರೆ ಅವರ ಭಾಷಣ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆಗೆ ತರ್ಜುಮೆ ಆಗದ ಕಾರಣ ಅವರ ಭಾಷಣವನ್ನು ಆರಂಭದಲ್ಲಿಯೇ ತಡೆಹಿಡಿಯಲಾಯಿತು. ವಿಶ್ವಸಂಸ್ಥೆಯ ಸಭೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ ಆದರೆ ಭಾಷಣವನ್ನು ಇಂಗ್ಲೀಷ್ ಸೇರಿದಂತೆ ವಿಶ್ವಸಂಸ್ಥೆಯ ಅನುಮೋದನೆ ಇರುವ ಕೆಲವು ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುತ್ತದೆ. ಆದರೆ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ತರ್ಜುಮೆ ಮಾಡಲಾಗಿರಲಿಲ್ಲ. ಅಥವಾ ತಾಂತ್ರಿಕ ಸಮಸ್ಯೆಯಿಂದ ಅವರ ಭಾಷಣದ ತರ್ಜುಮೆ ಪ್ರಸಾರವಾಗಲಿಲ್ಲ. ಹೀಗಾಗಿ ಅವರ ಭಾಷಣವನ್ನು ತಡೆ ಹಿಡಿದು ಬೇರೊಬ್ಬ ಸ್ಪೀಕರ್ಗೆ ಅವಕಾಶ ನೀಡಲಾಯ್ತು. ಹೀಗಾಗಿ ರಿಷಬ್ ಶೆಟ್ಟಿಯವರ ವಿಶ್ವಸಂಸ್ಥೆ ಭಾಷಣ ಕೇವಲ ಹನ್ನೆರಡು ಸೆಕೆಂಡ್ಗಳಿಗಷ್ಟೆ ಸೀಮಿತವಾಯಿತು.
ಆದರೂ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕನ್ನಡ ದನಿ ಪಸರಿಸುವ ಕಾರ್ಯವನ್ನು ರಿಷಬ್ ಶೆಟ್ಟಿ ಮಾಡಿದರು. ಈ ಬಾರಿ ಪಂಚೆಯಲ್ಲಲ್ಲದೆ, ಸರಳ ಭಾರತೀಯ ಉಡುಗೆ ಬಿಳಿಯ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ, ಉತ್ಸಾಹದಿಂದ, ಆತ್ಮವಿಶ್ವಾಸದಿಂದ ಭಾಷಣ ಆರಂಭಿಸಿದರು. ವಿಶ್ವಸಂಸ್ಥೆಯ ಸಭೆಯಲ್ಲಿ ಭಾಷಣಕಾರರಿಗೆ ಸೀಮಿತ ಸಮಯ ನೀಡುವ ಕಾರಣ, ತುಸು ವೇಗವಾಗಿ ಭಾಷಣ ಓದಲು ಆರಂಭಿಸಿದ ರಿಷಬ್, ”ನಮಸ್ಕಾರ ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ” ಎಂದರು.
ರಿಷಬ್ ಶೆಟ್ಟಿ ಟ್ವೀಟ್
Proud to represent ECO FAWN in submitting Oral Statement at UNHRC. The significance in promotion of cultural rights of forest dwellers and protection of forests in Kantara is deciphered at the international forum. pic.twitter.com/1sAz2dTbqg
— Rishab Shetty (@shetty_rishab) March 16, 2023
ಆದರೆ ರಿಷಬ್ ಶೆಟ್ಟಿಯ ಭಾಷಣ ಬೇರೆ ಭಾಷೆಗಳಲ್ಲಿ ತರ್ಜುಮೆ ಆಗದ ಕಾರಣ ಅವರ ಭಾಷಣವನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ ಉಪಾಧ್ಯಕ್ಷೆ ಮರಿಯಾ ಮೇರಿಯಲ್ ಮೆಕ್ಡೋನಲ್ ಅಲ್ವಾರೆಜ್ ತಡೆ ಹಿಡಿದರು. ‘ಕ್ಷಮೆ ಇರಲಿ, ಆದರೆ ತರ್ಜುಮೆ ಇಲ್ಲದ ಕಾರಣ ನಾವು ಮತ್ತೊಬ್ಬ ಸ್ಪೀಕರ್ಗೆ ಅವಕಾಶ ಕೊಡೋಣ’ ಎಂದರು. ಅಲ್ಲಿಗೆ ಒಂದೂವರೆ ನಿಮಿಷಗಳ ಕಾಲ ಮಾತನಾಡಬೇಕಿದ್ದ ರಿಷಬ್ ಶೆಟ್ಟಿಯವರ ಕನ್ನಡ ಭಾಷಣ ಕೇವಲ 12 ಸೆಕೆಂಡ್ಗೆ ಮುಕ್ತಾಯವಾಗಿಬಿಟ್ಟಿತು.
ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ದಕ್ಕೆ ತುಸು ವಿಚಲಿತರಾದಂತೆ ಕಂಡು ಬಂದ ರಿಷಬ್ ಶೆಟ್ಟಿ, ಸಮಸ್ಯೆ ಏನಾಯಿತೆಂದು ಆಯೋಜಕರ ಪ್ರತಿನಿಧಿಯೊಬ್ಬರ ವಿಚಾರಿಸಿದರು. ಆದರೆ ಅದರಿಂದ ಹೆಚ್ಚಿನ ಉಪಯೋಗವಾಗಲಿಲ್ಲ. ತಮ್ಮ ಸಮಯ ಮುಗಿದಿದ್ದರಿಂದ ರಿಷಬ್ ಶೆಟ್ಟಿಯವರು ಬೇರೊಬ್ಬರಿಗೆ ಸ್ಥಳಾವಕಾಶ ಬಿಟ್ಟುಕೊಟ್ಟರು.
ಆದರೆ ರಿಷಬ್ ಶೆಟ್ಟಿಯವರು ತುಸು ಸಮಯವಾದರೂ ವಿಶ್ವಸಂಸ್ಥೆಯ ಬಹುಮುಖ್ಯ ಸಭೆಯಲ್ಲಿ ಕನ್ನಡ ಮಾತನಾಡಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿವಹಿಸಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯವೇ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾರ್ಚ್ 17 ರಂದು ವಿಶೇಷ ಪ್ರದರ್ಶನ ಕಾಣಲಿದೆ ಎನ್ನಲಾಗುತ್ತಿದ್ದು, ಆ ಸಂದರ್ಭದಲ್ಲಿಯಾದರೂ ರಿಷಬ್ಗೆ ತಮ್ಮ ಅಭಿಪ್ರಾಯ ಹೇಳಲು ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ